ರಾಜ್ಯದಲ್ಲಿ ಕೊರೋನಾ ರಣ ಅಟ್ಟಹಾಸ ಮಿತಿ ಮೀರಿದೆ. ಇಂದು ಬೆಂಗಳೂರಿನಲ್ಲಿ ದಾಖಲೆಯ 2,344 ಹೊಸ ಸೋಂಕಿತರ ವರದಿಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮೊದಲ ಬಾರಿಗೆ 24 ಗಂಟೆಯಲ್ಲಿ 4 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಇದರಿಂದಾಗಿ 50,000 ಸೋಂಕಿತರಿರುವ ಭಾರತದ ನಾಲ್ಕನೇ ರಾಜ್ಯವೆನಿಸಿದೆ. ಇಂದಿನ 4,169 ಸೇರಿ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51,422 ಗೆ ಏರಿಕೆಯಾಗಿದೆ. ಇವುಗಳ ಪೈಕಿ, 30,655 ಪ್ರಕರಣಗಳು ಸಕ್ರಿಯವಾಗಿದೆ.
ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದೆ. ಆದರೆ ಇಂದು ದಾಖಲೆಯ 2,344 ಸೋಂಕಿತರ ವರದಿಯಾಗಿದ್ದು, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18,828 ಗೆ ಏರಿದೆ. ದಕ್ಷಿಣ ಕನ್ನಡ (1,758) ಮತ್ತು ಧಾರವಾಡ (1,006) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಅದಲ್ಲದೆ ರಾಜ್ಯ ರಾಜಧಾನಿದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 25,000 ದಾಟಿದ್ದು, ಹಲವರ ಸೋಂಕಿನ ಮೂಲವೇ ಸಿಗದಿರುವುದು ಸರ್ಕಾರಕ್ಕೆ ತಲೆ ನೋವುಂಟು ಮಾಡಿದೆ ಮತ್ತು ಜನತೆಯಲ್ಲಿ ಆತಂಕವನ್ನು ಹೆಚ್ಚಿಸಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 7 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ದಕ್ಷಿಣ ಕನ್ನಡ 238, ಧಾರವಾಡ 176, ವಿಜಯಪುರ 144, ಮೈಸೂರು 130, ಕಲಬುರ್ಗಿ 123, ಉಡುಪಿ 113, ರಾಯಚೂರು 101 ಸೋಂಕಿತರು ಇಂದು ಬೆಳಕಿಗೆ ಬಂದಿರುತ್ತಾರೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು 1,263 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 19,729 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು ದಾಖಲೆಯ 104 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ.