ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಇಂದು ಬೆಂಗಳೂರಿನಲ್ಲಿ 2,125 ಹೊಸ ಸೋಂಕಿತರ ವರದಿಯಾಗಿದೆ. ಇದನ್ನೂ ಸೇರಿದಂತೆ, ರಾಜ್ಯದಲ್ಲಿಂದು 4 ಸಾವಿರಕ್ಕೂ ಅಧಿಕ ಸೋಂಕಿತರು ದಾಖಲಾಗಿದ್ದಾರೆ.
ರಾಜ್ಯದಲ್ಲಿ ಇಂದಿನ 4,537 ಸೇರಿ, ಒಟ್ಟು ಸೋಂಕಿತರ ಸಂಖ್ಯೆ 59,652 ಗೆ ಏರಿಕೆಯಾಗಿದೆ. ಇವುಗಳ ಪೈಕಿ, 36,631 ಪ್ರಕರಣಗಳು ಸಕ್ರಿಯವಾಗಿದೆ.
ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದೆ. ಆದರೆ ಈಗ ಸತತ ಮೂರನೇ ದಿನ ಎರಡು ಸಾವಿರಕ್ಕೂ ಅಧಿಕ ಸೋಂಕಿತರು ದಾಖಲಾಗಿದ್ದಾರೆ. ಇಂದಿನ 2,125 ಸೋಂಕಿತರ ವರದಿಯಾಗಿದ್ದು, ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,449 ಗೆ ಏರಿದೆ. ದಕ್ಷಿಣ ಕನ್ನಡ (2,183) ಮತ್ತು ಧಾರವಾಡ (1,216) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 10 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ದಕ್ಷಿಣ ಕನ್ನಡ 509, ಧಾರವಾಡ-186, ವಿಜಯಪುರ-176, ಬಳ್ಳಾರಿ-155, ಬೆಳಗಾವಿ-137, ಉತ್ತರ ಕನ್ನಡ-116, ಶಿವಮೊಗ್ಗ-114, ಉಡುಪಿ-109, ಚಿಕ್ಕಬಳ್ಳಾಪುರ-107, ಮೈಸೂರು-101 ಸೋಂಕಿತರ ವರದಿಯಾಗಿದೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು 1,018 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ರಾಜ್ಯದಲ್ಲಿ ಇದುವರೆಗೆ, ಒಟ್ಟು 21,775 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು 93 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇವುಗಳ ಪೈಕಿ ಸುಮಾರು 50 ಸಾವುಗಳು ಬೆಂಗಳೂರಿನಲ್ಲಿಯೇ ಸಂಭವಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 1,240 ಗೆ ಏರಿದೆ