ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗೆ ಪ್ರತಿದಿನ 4-5 ಸಾವಿರ ಹೊಸ ಸೋಂಕಿತರ ವರದಿಯಾಗುತ್ತಿದೆ. ಇಂದು ಮೊದಲ ಬಾರಿಗೆ 6 ಸಾವಿರಕ್ಕೂ ಅಧಿಕ ಸೋಂಕಿತರು ಬೆಳಕಿಗೆ ಬಂದಿದ್ದಾರೆ.
ರಾಜ್ಯದಲ್ಲಿಂದು 6,128 ಸೋಂಕಿತರು ವರದಿಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1,18,632 ಗೆ ಏರಿಕೆಯಾಗಿದ್ದು, 69,700 ಪ್ರಕರಣಗಳು ಸಕ್ರಿಯವಾಗಿದೆ.
ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದಿನ 2,233 ಸೇರಿದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 36,523 ಗೆ ಏರಿದೆ. ಬಳ್ಳಾರಿ (3,423) ಮತ್ತು ದಕ್ಷಿಣ ಕನ್ನಡ (2,811) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 6 ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಮತ್ತು 10 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಮೈಸೂರು 430, ಬಳ್ಳಾರಿ 343, ಉಡುಪಿ 248, ಬೆಂಗಳೂರು ಗ್ರಾಮಾಂತರ 224, ಕಲಬುರ್ಗಿ 220, ಬೆಳಗಾವಿ 202, ದಕ್ಷಿಣ ಕನ್ನಡ 198, ಧಾರವಾಡ 180, ರಾಯಚೂರು 166, ಶಿವಮೊಗ್ಗ 143, ಬಾಗಲಕೋಟೆ 126, ಚಿಕ್ಕಮಗಳೂರು 126, ವಿಜಯಪುರ 124, ಉತ್ತರ ಕನ್ನಡ 120, ರಾಮನಗರ 106, ತುಮಕೂರು 104 ಹೊಸ ಸೋಂಕಿತರ ವರದಿಯಾಗಿದೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು ಒಟ್ಟು 3,793 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 46,694 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು 83 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 2,230 ಗೆ ಏರಿದೆ.