ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಸತತ ನಾಲ್ಕು ದಿನಗಳಿಂದ 2 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದ್ದ ಬೆಂಗಳೂರಿನಲ್ಲಿ ಇಂದು, 1,452 ಹೊಸ ಸೋಂಕಿತರ ವರದಿಯಾಗಿದೆ. ಇದನ್ನೂ ಸೇರಿದಂತೆ, ರಾಜ್ಯದಲ್ಲಿಂದು 3,648 ಸೋಂಕಿತರು ದಾಖಲಾಗಿದ್ದಾರೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 67,420 ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ, 42,216 ಪ್ರಕರಣಗಳು ಸಕ್ರಿಯವಾಗಿದೆ.
ರಾಷ್ಟ್ರಕ್ಕೆ ಮಾದರಿ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದಿನ 1,452 ಸೇರಿದಂತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 25,574 ಗೆ ಏರಿದೆ. ದಕ್ಷಿಣ ಕನ್ನಡ (2,459) ಮತ್ತು ಧಾರವಾಡ (1,465) ಸಕ್ರಿಯ ಪ್ರಕರಣಗಳ ಲೆಕ್ಕಾಚಾರದಲ್ಲಿ ನಂತರದ ಸ್ಥಾನದಲ್ಲಿದೆ.
ಇಂದಿನ ವರದಿಯಲ್ಲಿ ರಾಜ್ಯ ರಾಜಧಾನಿಯನ್ನು ಹೊರತುಪಡಿಸಿ, 3 ಇತರ ಜಿಲ್ಲೆಗಳಲ್ಲಿ 200ಕ್ಕೂ ಅಧಿಕ ಮತ್ತು 3 ಇತರ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ. ಬಳ್ಳಾರಿ 234 , ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರ್ಗಿ 124 ಸೋಂಕಿತರ ವರದಿಯಾಗಿದೆ.
ರಾಜ್ಯದಲ್ಲಿ ಕೊರೋನಾ ರಣಕೇಕೆಯ ಮಧ್ಯದಲ್ಲಿ, ಇಂದು ಒಟ್ಟು 730 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇದುವರೆಗೆ, ಒಟ್ಟು 23,795 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯಾದ್ಯಂತ ಕೊರೋನಾ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಇಂದು 72 ಸೋಂಕಿತರನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 1,403 ಗೆ ಏರಿದೆ