ಕರಾವಳಿಯಲ್ಲಿ ಹಬ್ಬ ಹರಿದಿನವೆಂದರೆ ಕಡಿಮೆಯೇ? ಅದರ ಗೌಜಿ ಗಮ್ಮತ್ತೇ ಬೇರೆ. ನಾಗರಪಂಚಮಿಯ ನಂತರ ಸಾಲು ಸಾಲಾಗಿ ಹಬ್ಬಗಳು ಬರುತ್ತಲೇ ಇವೆ. ಇವತ್ತು ಅತ್ಯಂತ ವರ್ಣಮಯ, ವೈವಿಧ್ಯಪೂರ್ಣ ಗಣೇಶ ಚತುರ್ಥಿ. ವಿಘ್ನನಾಶಕನ ಧ್ಯಾನದೊಂದಿಗೆ ಹಬ್ಬದ ಸವಿಯೂಟ ಉಣ್ಣುವ ಕ್ಷಣ.
ಶಾಲಾ ದಿನದಲ್ಲಿ ಸಂಜೆ ಶಾಲೆ ಬಿಟ್ಟು ನಡೆದುಕೊಂಡು ಬರುತ್ತಿದ್ದಾಗ ಸಿಗುತ್ತಿದ್ದ ಮಜಾ ನೆನಪಿಸಿಕೊಳ್ಳಿ. ದೇವಸ್ಥಾನದ ಬಳಿ ತಯಾರಾಗಿ ನಿಲ್ಲುವ ಟ್ರಕ್ಕುಗಳು, ಅಲಂಕೃತ ಟ್ಯಾಬ್ಲೋಗಳು, ಕಿಕ್ಕಿರಿದು ಸೇರುವ ಜನ, ಗಣಪತಿಯ ಆಕರ್ಷಕ ಮೂರ್ತಿ ನೋಡಲು ಎಲ್ಲರಿಗೂ ಕುತೂಹಲ ….ಆ ಅಲಂಕೃತ ವಿನಾಯಕನನ್ನು ನೋಡಲು ಎರಡು ಕಣ್ಣು ಸಾಲದು. ಕೊರೋನಾದಿಂದ ಈ ಬಾರಿ ಹಬ್ಬದ ಕಳೆ ಮಾಸಿದೆ. ಹಬ್ಬವೆಂದು ಸಂಭ್ರಮಿಸುವ ಜನರಿಲ್ಲ, ಕಬ್ಬು ಖರೀದಿಸಲು ಮುಗಿ ಬೀಳುತ್ತಿದ್ದ ಗ್ರಾಹಕರಿಲ್ಲ, ಶಾಲೆಯಿಂದ ಬರುವಾಗ ಸಂಭ್ರಮಿಸಲು ಶಾಲೆಯೇ ಓಪನ್ ಆಗಿಲ್ಲ, ಮೆರವಣಿಗೆಯಂತೂ ಇಲ್ಲವೇ ಇಲ್ಲ. ಎಲ್ಲಾ ನೀರಸಮಯ, ಹಬ್ಬವೇ ಮಾಸ್ಕ್ ಮಯ. …
ಅಷ್ಟೇ ಏಕೆ, ಗಣೇಶ ಚತುರ್ಥಿಗೆ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಯ ಗಾತ್ರವು ಸಣ್ಣದಾಗಿದೆ. ಮುಂದೆ ಬರುವ ದೀಪಾವಳಿಯ ಹಬ್ಬವೂ ಇದೇ ತೆರನಾಗಿ ಇರುವುದರಲ್ಲಿ ಸಂಶಯವಿಲ್ಲ. ಸಾಲು ಸಾಲು ಹಬ್ಬಗಳು, ನಡುವೆ ಕೊರೋನಾದ ಹಲವು ಸವಾಲುಗಳು ….,ಎಲ್ಲವನ್ನು ಎದುರಿಸಿ ಆಚರಿಸಲೇಬೇಕು ಹಬ್ಬವನ್ನು ನಾವುಗಳು. ಇರಲಿ, ವಿಘ್ನನಾಶಕ ಗಣಪ ಈ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲಿ ಎಂದು ಬೇಡಿಕೊಳ್ಳೋಣ.
✍️ಅರ್ಪಿತಾ ಕುಂದರ್
ಪ್ರಥಮ ಎಂಸಿಜೆ
ವಿವೇಕಾನಂದ ಕಾಲೇಜು ಪುತ್ತೂರು