ತಿರುವನಂತಪುರ: ಈ ಬಾರಿ ಶಬರಿಮಲೆ ಯಾತ್ರೆ ಕೊರೊನಾ ಮಾರ್ಗಸೂಚಿಗಳಿಗೆ ಅನುಸಾರ ನಡೆಯಲಿದೆ ಎಂದು ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ. ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾತ್ರಾರ್ಥಿಗಳನ್ನು ಶಬರಿಮಲೆ ದೇವಸ್ಥಾನಕ್ಕೆ ಅನುಮತಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯಾತ್ರೆಯು ನಿಯಮ ಸಂಹಿತೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಿರಬೇಕು ಎಂದು ಸಚಿವರು ಹೇಳಿದರು.ಯಾತ್ರಿಕರಿಗೆ ಕೊರೊನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯವಾಗಲಿದ್ದು, ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಶಬರಿಮಲೆ ದರ್ಶನ ಏರ್ಪಡಿಸಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಬರುವ ಯಾತ್ರಾರ್ಥಿಗಳನ್ನು ಆನ್ಲೈನ್ ನೋಂದಣಿ ಮೂಲಕ ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ಸೇರಿಸಿಕೊಂಡು ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಿಲ್ಲದೆ ದರ್ಶನಕ್ಕೆ ಕರೆತರಲು ವ್ಯವಸ್ಥೆ ಮಾಡಲು ಸಭೆ ನಿರ್ಧರಿಸಿತು.ತುರ್ತು ಕೊರೊನಾ ಪರಿಸ್ಥಿತಿ ಇದ್ದಲ್ಲಿ ಪೂರ್ಣ ಪ್ರಮಾಣದ ತೀರ್ಥಯಾತ್ರೆಗೆ ಮಿತಿಗಳನ್ನು ಹೇರಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ನವೆಂಬರ್ 16 ರಿಂದ ಪ್ರಾರಂಭವಾಗಲಿರುವ ಈ ಬಾರಿಯ ಶಬರಿಮಲೆ ತೀರ್ಥಯಾತ್ರೆಗೆ ಸಿದ್ಧತೆ ನಡೆಸಲು ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಆನ್ಲೈನ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.