ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊದಲ ಪ್ಲಾಸ್ಮಾ ಥೆರಪಿ ಘಟಕ ಪ್ರಾರಂಭಿಸಲು ಅನುಮತಿ ದೊರೆತಿದೆ.
ಡಿಸಿಜಿಐ(ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ)ದಿಂದ ರಕ್ತನಿಧಿಯ ಸೌಲಭ್ಯಗಳನ್ನು ಪರಿಶೀಲಿಸಿ ಪ್ಲಾಸ್ಮಾ ಚಿಕಿತ್ಸೆಗೆ ಅಧಿಕೃತ ಪರವಾನಿಗೆ ನೀಡಿದೆ. ಮೊದಲ ದಿನವೇ ಮೂವರು ದಾನಿಗಳಿಂದ ಪ್ಲಾಸ್ಮಾ ಸ್ವೀಕರಿಸಿ, ಅದನ್ನು ಬಳಸಿಕೊಂಡು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಧುನಿಕ ಸಾಧನಗಳು ಮತ್ತು ನುರಿತ ತಂತ್ರಜ್ಞರಿಂದ ಸುಸಜ್ಜಿತವಾಗಿರುವ ಬ್ಲಡ್ ಬ್ಯಾಂಕ್ನಿಂದಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯೂ ಸೇರಿದಂತೆ ಕೊವಿಡ್-19 ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಿದೆ.
ನಿಟ್ಟೆ ವಿಶ್ವವಿದ್ಯಾನಿಲಯದ ರಕ್ತನಿಧಿಯು ಕರಾವಳಿ ಕರ್ನಾಟಕದ ಮೊಟ್ಟಮೊದಲ ಬ್ಲಡ್ ಬ್ಯಾಂಕ್ ಮತ್ತು ಸಿಂಗಲ್ ಡೋನರ್ ಪ್ಲೇಟ್ಲೆಟ್ ಸೌಲಭ್ಯ ಹೊಂದಿರುವ ಸುಸಜ್ಜಿತ ಆಸ್ಪತ್ರೆಯಾಗಿದೆ.
ಯಾವುದೇ ವ್ಯಕ್ತಿ ಕೋವಿಡ್-19ರಿಂದ ಗುಣಮುಖರಾಗಿದ್ದಲ್ಲಿ ಪ್ಲಾಸ್ಮಾ ದೇಣಿಗೆ ನೀಡಬಹುದು. ಇದರ ಜತೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರು, ಎಲ್ಲ ಪುರುಷರು ಹಾಗೂ ಈವರೆಗೆ ಗರ್ಭಿಣಿಯರಾಗಿರದ ಮಹಿಳೆಯರು, 55 ಕಿ.ಗ್ರಾಂಗಿಂತ ಹೆಚ್ಚು ತೂಕವನ್ನು ಹೊಂದಿರುವವರು, ಆಸ್ಪತ್ರೆಯಿಂದ ಬಿಡುಗಡೆಗೊಂಡ 28 ದಿನಗಳ ಬಳಿಕ ಪ್ಲಾಸ್ಮಾ ದೇಣಿಗೆ ನೀಡಬಹುದು.